ಪರಿವರ್ತನ್ ಪ್ರಭ:
ಚನ್ನಪಟ್ಟಣ ತಾಲ್ಲೂಕಿನ ಕೂಡ್ಲೂರು ರಸ್ತೆಯಲ್ಲಿರುವ ಶಿಶಿರ ರೆಸಾರ್ಟ್ನಲ್ಲಿ ಬುಧವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ, ಚುನಾವಣಾ ನೀತಿ ಸಂಹಿತೆ ಕಾರಣಕ್ಕಾಗಿ ಬಾಡೂಟ ಸಿಗದೆ ಕಾರ್ಯಕರ್ತರು ನಿರಾಸೆಗೊಂಡರು. ಬಿಜೆಪಿ- ಜೆಡಿಎಸ್ ಮೈತ್ರಿ ಟಿಕೆಟ್ ಆಕಾಂಕ್ಷಿಯೂ ಆಗಿರುವ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ನೇತೃತ್ವದಲ್ಲಿ ನಡೆದ ಸಭೆಯ ಬಳಿಕ, ಮಧ್ಯಾಹ್ನ ಕೋಳಿ ಮಾಂಸದೂಟದ ವ್ಯವಸ್ಥೆ ಮಾಡಲಾಗಿತ್ತು.
ವಿಷಯ ತಿಳಿದು ಚುನಾವಣಾ ಅಧಿಕಾರಿ ಪಿ.ಕೆ. ಬಿನೋಯ್ ನೇತೃತ್ವದ ಅಧಿಕಾರಿಗಳ ತಂಡ ಪೊಲೀಸರೊಂದಿಗೆ ಸ್ಥಳಕ್ಕೆ ಭೇಟಿ ನೀಡಿತು. ಅಡುಗೆ ತಯಾರಾಗುತ್ತಿದ್ದ ಕೋಣೆಗೆ ತೆರಳಿ ಪರಿಶೀಲನೆ ನಡೆಸಿ ಅಡುಗೆ ಕೋಣೆ ಮತ್ತು ಊಟದ ಕೋಣೆಯ ಬಾಗಿಲು ಬಂದ್ ಮಾಡಿ ಎಲ್ಲವನ್ನೂ ವಶಕ್ಕೆ ಪಡೆದರು.
ಸಭೆ ಮುಗಿಯುತ್ತಿದ್ದಂತೆ, ಪಕ್ಕದ ಅಡುಗೆ ಮನೆಯಿಂದ ಮೂಗಿಗೆ ಬಡಿಯುತ್ತಿದ್ದ ಬಾಡೂಟ ಸವಿಯಲು ಊಟದ ಕೋಣೆಯತ್ತ ನುಗ್ಗಿದವರನ್ನು ತಡೆದ ಪೊಲೀಸರು, ಚುನಾವಣೆ ನೀತಿ ಸಂಹಿತೆ ಇರುವುದರಿಂದ ಊಟವನ್ನು ರದ್ದುಪಡಿಸಲಾಗಿದೆ ಎಂದು ವಾಪಸ್ ಕಳಿಸಿದರು.
ಅಡುಗೆ ಮಾಡುವವರನ್ನು ಹೊರಕ್ಕೆ ಕಳಿಸಿದ ಚುನಾವಣಾ ಅಧಿಕಾರಿಗಳು, ಬಾಡೂಟವನ್ನು ವಶಪಡಿಸಿಕೊಂಡರು