ಪರಿವರ್ತನ್ ಪ್ರಭ:
ಬುಧವಾರ ದೆಹಲಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಆಕಾಸ ಏರ್ ವಿಮಾನದಲ್ಲಿ ಬಾಂಬ್ ಇರಿಸಲಾಗಿದೆ ಎಂಬ ಸಂದೇಶ ಸಂಚಲವನ್ನೇ ಸೃಷ್ಟಿ ಮಾಡಿದೆ. ದೆಹಲಿಯಿಂದ ಹೊರಟ ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂಬ ಸಂದೇಶ ಬಂದಿದ್ದರಿಂದ ವಿಮಾನವನ್ನು ದೆಹಲಿಗೆ ವಾಪಸ್ ಕಳುಹಿಸಲಾಗಿದೆ. ಅಲ್ಲಿ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದು ತಪಾಸಣೆ ನಡೆಸಲಾಗುತ್ತಿದೆ.
ಇಂಡಿಗೋ ಮತ್ತು ಏರ್ ಇಂಡಿಯಾದ ನಂತರ ಎರಡು ದಿನಗಳಲ್ಲಿ ಆಕಾಸ ಏರ್ ವಿಮಾನಕ್ಕೂ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ದೆಹಲಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಆಕಾಸ ಏರ್ ವಿಮಾನದಲ್ಲಿ ಒಟ್ಟು 184 ಮಂದಿ ಪ್ರಯಾಣಿಕರು ಇದ್ದರು. ವಿಮಾನದಲ್ಲಿ ಬಾಂಬ್ ಇರುವ ಬಗ್ಗೆ ಮಧ್ಯಾಹ್ನ 1.15ಕ್ಕೆ ಮಾಹಿತಿ ಲಭಿಸಿದೆ. ವಿಮಾನ ಟೇಕ್ಆಫ್ ಆಗುತ್ತಿದ್ದಂತೆ ಈ ಸಂದೇಶ ಬಂದಿದ್ದು, ವಿಮಾನವನ್ನು ತಕ್ಷಣವೇ ದೆಹಲಿಯ ಐಜಿಐ ವಿಮಾನ ನಿಲ್ದಾಣಕ್ಕೆ ಹಿಂತಿರುಗಿಸಲಾಗಿದೆ. ವಿಮಾನವನ್ನು ಪ್ರತ್ಯೇಕವಾಗಿ ಲ್ಯಾಂಡ್ ಮಾಡಲಾಗಿದೆ. ವಿಮಾನ ಸುರಕ್ಷತವಾಗಿ ಲ್ಯಾಂಡ್ ಆಗಿದ್ದು ಪ್ರಯಾಣಿಕರು ಮತ್ತು ಸಿಬ್ಬಂದಿಗಳು ಸುರಕ್ಷಿತವಾಗಿದ್ದಾರೆ.
ದೆಹಲಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಆಕಾಸ ಏರ್ ವಿಮಾನದಲ್ಲಿ ಬಾಂಬ್ ಬೆದರಿಕೆ ಇರುವ ಬಗ್ಗೆ ಮಾಹಿತ ಬಂದ ಬಳಿಕ ದೆಹಲಿ ಪೊಲೀಸರು ವಿಮಾನ ನಿಲ್ದಾಣ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಸ್ಟ್ಯಾಂಡರ್ಡ್ ಸುರಕ್ಷತಾ ಪ್ರೋಟೋಕಾಲ್ಗಳನ್ನು ಅನುಸರಿಸಿ, ವಿಮಾನವನ್ನು ತಕ್ಷಣವೇ ದೆಹಲಿಯ ಐಜಿಐ ವಿಮಾನ ನಿಲ್ದಾಣಕ್ಕೆ ಹಿಂತಿರುಗಿಸಲಾಗಿದೆ. ಅಲ್ಲಿ ಅದನ್ನು ಸುರಕ್ಷಿತವಾಗಿ ಇಳಿಸಲಾಗಿದೆ. ವಿಮಾನವನ್ನು ಪ್ರತ್ಯೇಕವಾಗಿ ಲ್ಯಾಂಡ್ ಮಾಡಲಾಗಿದ್ದು ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆವಾಗಿದ್ದಾರೆ. ಜೊತೆಗೆ ಅವರ ಸುರಕ್ಷತೆಗೆ ಅಗತ್ಯವಿರುವ ಎಲ್ಲಾ ಕಾರ್ಯವಿಧಾನಗಳನ್ನು ಅನುಸರಿಸಲಾಗುತ್ತಿದೆ.
ಘಟನೆಯ ಬಗ್ಗೆ ಮಾಹಿತಿ ನೀಡಿದ ಆಕಾಸ ಏರ್ನ ವಕ್ತಾರರು, ‘ಅಕಾಸ ಏರ್ ಫ್ಲೈಟ್ ಕ್ಯೂಪಿ 1335, ಅಕ್ಟೋಬರ್ 16, 2024 ರಂದು ದೆಹಲಿಯಿಂದ ಬೆಂಗಳೂರಿಗೆ ಹಾರುತ್ತಿತ್ತು. ಅದರಲ್ಲಿ 174 ಪ್ರಯಾಣಿಕರು, 3 ಶಿಶುಗಳು ಮತ್ತು 7 ಸಿಬ್ಬಂದಿಗಳು ಇದ್ದರು. ಈ ವೇಳೆ ಭದ್ರತಾ ಎಚ್ಚರಿಕೆಯನ್ನು ಸ್ವೀಕರಿಸಲಾಗಿದೆ. ಆಕಾಶ ಏರ್ ತುರ್ತು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪೈಲಟ್ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಲ್ಯಾಂಡ್ ಮಾಡಿದ್ದಾರೆ. ದೆಹಲಿಯಲ್ಲಿ ಸುರಕ್ಷಿತ ಲ್ಯಾಂಡಿಂಗ್ಗೆ ಅಗತ್ಯವಿರುವ ಎಲ್ಲಾ ತುರ್ತು ಕಾರ್ಯವಿಧಾನಗಳನ್ನು ಕ್ಯಾಪ್ಟನ್ ಅನುಸರಿಸಿದ್ದಾರೆ. ಜೊತೆಗೆ ವಿಮಾನದಲ್ಲಿ ತಪಾಸಣೆಯನ್ನು ನಡೆಸಲಾಗುತ್ತಿದೆ. ವಿಮಾನದಲ್ಲಿನ ಪ್ರಯಾಣಿಕ ತಪಾಸಣೆಯನ್ನೂ ಮಾಡಲಾಗುತ್ತಿದೆ’ ಎಂದಿದ್ದಾರೆ.